Thursday 9 August, 2007

nodi jogana....




Monday 11 June, 2007

ಕೆಂಪಾದವೊ... ಎಲ್ಲ ಕೆಂಪಾದವೋ...

‘ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ನನ್ನ ಪತಿಯನ್ನು ಎಳೆದು ಒಂದೇ ಸಮನೆ ಹೊಡೆಯತೊಡಗಿದರು. ತನಗೂ ಪೊಲೀಸರಿಗೂ ಸಂಬಂಧ ಇಲ್ಲ ಎಂದು ನನ್ನ ಪತಿ ಪರಿಪರಿಯಾಗಿ ಬೇಡಿಕೊಂಡರು, ನಾನು ಮತ್ತು ಮಗ ಬಿಟ್ಟು ಬಿಡಿ ಎಂದು ನಕ್ಸಲರ ಕಾಲಿಗೆ ಬಿದ್ದೆವು, ಆದರೂ ಅವರಿಗೆ ಕರುಣೆ ಬರಲಿಲ್ಲ’...

ಈ ಆಕ್ರಂದನದ ನೋವು ಅದೆಷ್ಟು ಮನ ಮುಟ್ಟಿರಬಹುದೋ? ಅದೂ ಬೆಂಗಳೂರಿನಲ್ಲಿ ಕುಳಿತ ಮಂದಿಗೇನು ಗೊತ್ತಾಗಬೇಕು...

ನೆನಪಾಯ್ತಾ, ಜೂನ್ ರಾತ್ರಿ ೭.೫೦ರ ಸುಮಾರಿಗೆ ಶೃಂಗೇರಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಗಂಡಘಟ್ಟದಲ್ಲಿ ಒಂದು ಮುಗ್ದ ಜೀವ ಹಾರಿಹೋಯಿತು. ನೆಂಟರ ಮನೆಯಲ್ಲಿ ನಡೆಯುವ ತೊಟ್ಟಿಲು ಶಾಸ್ತ್ರಕ್ಕೆ ಹೊರಟ ವೆಂಕಟೇಶ್ ನಕ್ಸಲರ ಆಕ್ರೋಶಕ್ಕೆ ತನ್ನ ಕುಟುಂಬ, ನೆಲ ಎಲ್ಲವನ್ನೂ ಬಿಟ್ಟು ಹೊರಟೇ ಹೋದರು.
ಪತ್ನಿ, ಮಗನ ಆರ್ತನಾದದಿಂದ ನಕ್ಸಲರ ಮನ ಕರಗಲೂ ಇಲ್ಲ. ಅವರ ಹಾರಿಸಿದ ಗುಂಡು, ಬೀಸಿದ ಲಾಂಗಿನ ಹೊಡೆತಕ್ಕೆ ಜರ್ಜರಿತವಾಗಿ ಬಿದ್ದಿತ್ತು ವೆಂಕಟೇಶನ ದೇಹ.
ವರ್ಷದ ಹಿಂದೆ ಚಂದ್ರಯ್ಯನನ್ನು ಅಡ್ಡಡ್ಡಾ ಮಲಗಿಸಿ ಇನ್ನೂ ಸರಿಯಾಗದ ರೀತಿಯಲ್ಲಿ ಮೈಮೂಳೆ ಮುರಿದಾಗಿದೆ. ಶೇಷಯ್ಯ ಗೌಡ್ಲುವನ್ನು ಮನೆ ಮುಂದೇ ಅಟ್ಟಾಡಿಸಿಕೊಂಡು ಕೊಂದಾಗಿದೆ.

...
ಈಗ ಮತ್ತೆ ಮಲೆನಾಡಲ್ಲಿ ಪೊಲೀಸರ ಓಡಾಟ. ಅಲ್ಲಲ್ಲಿ ಸಭೆ, ಕೂಬಿಂಗ್. ಹಾಗೇ ಅತ್ತಿಂದಿತ್ತ ಬಾಲ ಸುಟ್ಟ ಬೆಕ್ಕಿನಿಂದ ತಿರುಗಾಡುತ್ತಿದ್ದಾರೆ. ಆದರೇನು ಪ್ರಯೋಜನ ಮತ್ತೊಂದು ಮುಗ್ದ ಜೀವ ಹೋಗಿಯಾಗಿದೆ.
ಮಲೆನಾಡಲ್ಲಿ ಕೆಂಪುಗಾಳಿ ಬೀಸಿದ್ದರ ಪ್ರತಿಫಲವಾಗಿ ಇದೀಗ ಏಳನೇ ಜೀವ ಹೋಗಿದೆ. ಅದೆಷ್ಟೋ ನೆಮ್ಮದಿ ಕೆಟ್ಟಿದೆ. ಅಕ್ಕಪಕ್ಕದವರನ್ನೂ ನಂಬದ ಸ್ಥಿತಿ. ನೆಮ್ಮದಿಗೆ ಕಲ್ಲು ಬಿದ್ದಿದೆ.
ಅತ್ತ ನಕ್ಸಲರ ಸಹವಾಸವೂ ಇತ್ತ ಪೊಲೀಸರಿಂದಲೂ ದೂರ ಇರಲಾಗದೆ ಬೆಂಕಿಯಿಂದ ಬಾಣಲೆಗೆ ಎಂಬಂತೆ ತತ್ತರಿಸಿ ಹೋಗಿದ್ದಾರೆ.
ನಕ್ಸಲರ ಪ್ರತಿಕಾರ ಭಾವನೆಗೆ ಈಗ ಬಲಿಯಾದ ವೆಂಕಟೇಶ್ ಕೆಸಮುಡಿ ಎನ್‌ಕೌಂಟರ್‌ಗೆ ಉತ್ತರವಂತೆ. ಆತ ಪೊಲೀಸರ ಇನ್‌ಫಾರ್‍ಮರ್ ಎಂಬ ಆರೋಪ. ಹೇಗಿದೆ ಪರಿಸ್ಥಿತಿ. ಪ್ರತೀಕಾರದ ನೆಪ. ಆದರೆ ಗಂಡಘಟ್ಟದಲ್ಲಿ ವೆಂಕಟೇಶನಿಗೆ ಉತ್ತಮ ಹೆಸರಿತ್ತು. ಸಣ್ಣ ವ್ಯಾಪಾರ ಮಾಡಿಕೊಂಡು ಈತ ಜೀವನ ನಿರ್ವಹಿಸುತ್ತಿದ್ದ. ಸ್ಥಳೀಯರು ಹೇಳುವಂತೆ ಈತನು ನಕ್ಸಲರ ತಂಟೆಗೆ ಹೋದವನೇ ಅಲ್ಲ.
ಈ ಮುಂಚೆ ಹೆಮ್ಮಿಗೆ ಚಂದ್ರಕಾಂತನ ಮೇಲೆ ಹಲ್ಲೆ ನಡೆಸಿದ ನಕ್ಸಲರು ೨೦೦೫ ರ ಮೇ ೧೭ರಂದುಶೇಷೇಗೌಡ್ಲು ಹತ್ಯೆ ಮಾಡಿದ್ದರು. ಜಿಲ್ಲೆಯಲ್ಲಿ ವೆಂಕಟೇಶ್ ನಕ್ಸಲರಿಗೆ ಎರಡನೇ ಬಲಿಯಾಯಿತು.
ಸಾಕೇತ ರಾಜನ್ ಸಾವಿಗೆ ಸೇಡು ತೀರಿಸಿಕೊಳ್ಳಲು ಶೇಷಯ್ಯಗೌಡ್ಲು ಹತ್ಯೆ ಮಾಡಿದ್ದರೆ, ದಿನಕರನ ಸಾವಿಗೆ ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿದೆ.
ಉದ್ಯಾನವ್ಯಾಪ್ತಿ ಪ್ರದೇಶದಲ್ಲಿ ನಕ್ಸಲರು ತಮ್ಮ ಕುರಿತು ಜನರಿಗೆ ತೀವ್ರ ಭಯ ಮೂಡಿಸುವ ಪ್ರಯತ್ನವಾಗಿ ವೆಂಕಟೇಶನನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸರ್ಕಾರದ ವಿರುದ್ಧ ಒಂದು ರೀತಿಯ ಸೇಡಿನ ಭಾವನೆ ಜನರಲ್ಲೂ ವ್ಯಾಪಿಸತೊಡಗಲು ಪ್ರಾರಂಭವಾಗಿದೆ. ತಮ್ಮ ನೆರೆ ಹೊರೆಯವರ ಮೇಲೆ ದಾಳಿ ನಡೆಯುತ್ತಿದೆ. ಮುಂದೊಂದು ದಿನ ತಮ್ಮ ಮೇಲೂ ನಡೆದೀತೆಂಬ ಆತಂಕ ಹೆಚ್ಚಿದೆ. ಸರ್ಕಾರ ಜನರ ರಕ್ಷಣೆಗೆ ಬರದೇ ತೆಪ್ಪಗೆ ಕುಳಿತಿರುವುದಕ್ಕೆ ಅಸಮಾಧಾನದ ಹೊಗೆ ಎದ್ದಿದೆ. ಅದು ಶೃಂಗೇರಿ ಬಂದ್ ಮೂಲಕ ವ್ಯಕ್ತವಾಯಿತು.

ಪರಿಹಾರ ಕೊಟ್ಟರೆ ಮುಗೀತೆ...
ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟಂತೆ ಸರ್ಕಾರ ಈಗ ಪರಿಹಾರ ಕೊಟ್ಟಿದೆ. ಆದರೆ ಅದರ ಮುಂದೀಗ ದೊಡ್ಡ ಸವಾಲಿದೆ. ಎಂ.ಪಿ. ಪ್ರಕಾಶ್ ಹೀಗೆ ಹೇಳುತ್ತಾರೆ... ‘ನಕ್ಸಲರನ್ನು ಮದ್ದು ಗುಂಡಿನಿಂದ ಮಟ್ಟ ಹಾಕಲು ಸಾಧ್ಯವಿಲ್ಲ, ಆ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬೇಕು ಅಷ್ಟೇ’.
ಹೀಗೇ ಹೇಳಿದರೆ ಆಯಿತೇ ಎಂಬುದು ಪ್ರಶ್ನೆ. ಈ ಭಾಗದಲ್ಲಿ ನಡೆಯುವ ದೊಡ್ಡ ಮಟ್ಟದ ನಕ್ಸಲ್ ಸಂಬಂಧಿತ ಘಟನೆ ನಂತರ ಸರ್ಕಾರದಿಂದ ಬರುತ್ತಿರುವ ಮಾತು. ಆದರೆ ಉಪಯೋಗವಾಗೇ ಇಲ್ಲ. ಇಂತಹ ಘಟನೆಗೆ ಸರ್ಕಾರವೂ ಹೊಣೆ ಹೋರಲೇಬೇಕಾಗಿದೆ. ಘಟನೆ ಪುನರಾವರ್ತನೆ ಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಮಾನವ ಹಕ್ಕು ಆಯೋಗ ನಕ್ಸಲರ ಹತ್ಯೆಯಾದಾಗ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಏನೆಲ್ಲಾ ಮಾಡಿತೆಂದುಗೊತ್ತಿದೆ. ಆದೇ ನಕ್ಸಲರಿಂದ ಜೀವವೊಂದು ಹೋಯಿತೆಂದರೆ ಅದು ತಣ್ಣಗಾಗಿ ಬಿಡುತ್ತಿದೆ.
ಅದೇ ರೀತಿ ರಾಜ್ಯದಲ್ಲಿ ನಕ್ಸಲ್ ನಿಗ್ರಹ ದಳ ರೂಪುಗೊಂಡರೂ ನಕ್ಸಲೀಯರನ್ನು ನಿಗ್ರಹಿಸುವ ತೀರಾ ಹಿಂದುಳಿದಿದೆ. ನಕ್ಸಲೀಯರು ಮಲೆನಾಡಿಗೆ ಅಡಿಯಿಟ್ಟು ಐದು ವರ್ಷಗಳೇ ಕಳೆದಿವೆ. ಈ ಐದು ವರ್ಷಗಳಲ್ಲಿ ನಡೆದಿರುವ ಒಟ್ಟಾರೆ ಘಟನೆಗಳನ್ನು ಗಮನಿಸಿದರೆ ಪೊಲೀಸರಿಗಿಂತ ನಕ್ಸಲರದೇ ಮೇಲುಗೈ.
ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಯಿತು. ಜೀಪು, ಕಂಪ್ಯೂಟರ್, ವಿಸಿಆರ್ ಮತ್ತು ಕಡತ ಬೆಂಕಿಗೆ ಆಹುತಿಯಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಜೀವಭಯದಲ್ಲಿ ಕೆಲಸ ಮಾಡುವ ಹಾಗಾಯಿತು.
ಪಶ್ಚಿಮಘಟ್ಟದ ದಟ್ಟ ಕಾನನ ಮಧ್ಯೆ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡಿನಲ್ಲಿ ರಕ್ತದ ಕೋಡಿ. ಶಾಂತಿಯ ನೆಲವೀಡಲ್ಲಿ ಈಗ ಗುಂಡಿನ ಸದ್ದು, ಕಾಳಗ, ಚಕಮಕಿ, ಅಪಹರಣ, ಹಲ್ಲೆ, ಕಾರ್ಯಾಚರಣೆ ಕೊನೆಗೆ ಸಾವಿನಲ್ಲಿ ಮುಕ್ತಾಯ. ಹೀಗೆ ಮಲೆನಾಡಿನಿಂದ ತುಂಗೆ, ಭದ್ರ ಹಾಗೇ ನೇತ್ರಾವತಿ ನದಿ ಹರಿಯುತ್ತಿದ್ದು ಅದರೊಂದಿಗೆ ರಕ್ತೇಶ್ವರಿ ಹರಿಯಲು ಸಿದ್ದತೆ ನಡೆಸಿದ್ದಾಳೆ. ರಕ್ತದ ತೊಟ್ಟು ಬೀಳಲಾರಂಭಿಸಿದೆ. ಹಲಿ ಗೂಡಿದರೆ ಹಳ್ಳ, ಹಳ್ಳ ಸೇರಿ ನದಿ....
ನಕ್ಸಲರ ವಿರುದ್ಧ ಈಗ ಪ್ರಬಲ ಜನಾಂದೋಲನ ಹುಟ್ಟಬೇಕಾದ್ದೊಂದೇ ಈ ಎಲ್ಲಾ ಸಮಸ್ಯೆ ಉತ್ತರವೇ?

ಕೆಂಪಾದವೊ... ಎಲ್ಲ ಕೆಂಪಾದವೋ...
ಹಸಿರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲಾ
ನೆತ್ತಾರು ಸುರಿದಂಗೆ ಕೆಂಪಾದವೋ
ಹೂವು ಬಳ್ಳಿಗಳೆಲ್ಲಾ ಕೆಂಪಾದವೋ,
ಊರು ಕಂದಮ್ಮಗಳು ಕೆಂಪಾದವೋ
....
ಭೂಮಿಯು ಎಲ್ಲಾನು ಕೆಂಪಾದವೋ...

ಲಂಕೇಶ ಅವರ ಈ ಸಾಹಿತ್ಯ ಮಲೆನಾಡಿಗೆ ಈಗ ಅನ್ವಯ.

Thursday 24 May, 2007

ಕಾಳಿಂಗಸರ್ಪಗಳ ರಾಜಧಾನಿ... ಆಗುಂಬೆ

ಎಂಥ ಚೆಂದ ನಮ್ಮ ಆಗುಂಬೆ. ಆ ಆಗುಂಬೆಗೆ ಅದೆಷ್ಟೋ ಗರಿಗಳು. ಪ್ರಕೃತಿ, ಸೂರ್ಯಾಸ್ತಮಾನ, ಮಳೆಯ ರಾಜಧಾನಿ ಹೀಗೆ. ಈ ಚೆಂದಕ್ಕೆ ಮತ್ತೊಂದು ಗರಿ ಅದು. ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ.ಕಾಳಿಂಗ ಸರ್ಪ ಅಲಿಯಾಸ್ ಕಿಂಗ್‌ಕೋಬ್ರಾ ಜಗತ್ತಿನ ವಿಷದ ಹಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಹಾವು. ಇದನ್ನು ದೃಡ ಪಡಿಸಿರುವವರು ವಿಶ್ವದ ಖ್ಯಾತ ಉರಗ ತಜ್ಞ ವಿಟೇಕರ್.೧೯೭೧ರಲ್ಲಿ ಆಗುಂಬೆಗೆ ಭೇಟಿ ನೀಡಿದ್ದ ವಿಟೇಕರ್‌ಗೆ ಮೊದಲು ಇಲ್ಲಿನ ಮನೆಯೊಂದರಲ್ಲಿ ೯ ಅಡಿ ಉದ್ದದ ಕಾಳಿಂಗ ದರ್ಶನವಾಯಿತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ಕಾಳಿಂಗ ಹಾವು ಕಾಣಿಸಿಕೊಂಡಿತು. ಮತ್ತು ಕಾಳಿಂಗನ ಬಗ್ಗೆ ಇಲ್ಲಿನ ಜನರು, ಅಂಗಡಿ ಕಟ್ಟೆಗಳಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಅವರಿಗೆ ಕುತೂಹಲ ಹೆಚ್ಚಿತು. ನಂತರ ಕಾಳಿಂಗನಬಗ್ಗೆ ರಿಸರ್ಚ್ ಮಾಡಲು ನಿರ್ಧರಿಸಿಯೇ ಬಿಟ್ಟರಂತೆ. ಹೀಗೆ ವಿವರಿಸಿದ್ದು ಅವರ ಶಿಷ್ಯ ಗೌರಿಶಂಕರ್.ಈ ಕಾಳಿಂಗ ರಾಜಧಾನಿಯಲ್ಲಿಗ ‘ರಾಜರ’ ರಿಸರ್ಚ್ ನಡೆಯುತ್ತಿದೆ. ಅವರ ಹಾವ- ಭಾವ, ಸಂತಾನ... ಹೀಗೆ ದಾಖಲಾತಿ ಆಂದೋಲನ.ಈ ಆಂದೋಲನದ ಪ್ರಥಮ ಮಾಹಿತಿ ಪ್ರಕಾರ ಆಂಗುಬೆ ಕಾಳಿಂಗನ ರಾಜಧಾನಿ ಎಂಬುದು ಬಹುತೇಕ ಖಚಿತವಾಗುವಂತೆ ಅಂಶಗಳು ಕಂಡುಬಂದಿವೆ.ಆಗುಂಬೆಯಲ್ಲಿ ವಿಟೇಕರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಈಗ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಇನ್ನೊಂದು ವರ್ಷದಲ್ಲಿ ಕಾಳಿಂಗ ಸರ್ಪದ ಸಾಕಷಷ್ಟು ಮಾಹಿತಿ ಸಿದ್ದವಾಗುತ್ತದೆ.ಇದರ ಬಗ್ಗೆ ರಿಸರ್ಚ್ ನಡೆಸಿ ಪ್ರಪಂಚಕ್ಕೆ ಮಾಹಿತಿ ನೀಡಲು ವಿಟೇಕರ್ ನೇತೃತ್ವದ ತಂಡ ಶ್ರಮಿಸುತ್ತಿದೆ.ಕಳೆದ ೨೨ ತಿಂಗಳಿಂದ ಮಳೆಕಾಡು ಸಂಶೋಧನಾ ಕೇಂದ್ರ ಈ ಕುರಿತು ತನ್ನ ಚಟುವಟಿಕೆ ಪ್ರಾರಂಭಿಸಿದ್ದು, ಪ್ರಸ್ತುತ ಪಶ್ಚಿಮ ಘಟ್ಟದಲ್ಲಿ ಕಾಳಿಂಗನ ನಡೆದಾಟದ ಬಗ್ಗೆ ಅಬ್ಸರ್‌ವೇಶನ್ ಕಾರ್‍ಯ ನಡೆದಿದೆ.‘ನಾವೀಗ ರೇಡಿಯೋ ಟೆಲಿಮೀಟರ್ ಮತ್ತು ಮೆಡಿಕಲ್ ಕ್ಯುಟೆರಿ ತಂತ್ರಜ್ಞಾನದ ಮೂಲಕ ಪರಿಶೀಲನಾ ಕಾರ್‍ಯ ನಡೆಸಲು ಸಿದ್ದತೆ ನಡೆಸುತ್ತಿದ್ದೇವೆ. ಇದನ್ನು ಬಳಸಲು ಅರಣ್ಯ ಇಲಾಖೆಯಿಂದ ಪರ್‍ಮಿಶನ್ ಬೇಕು. ನಂತರ ಕಾಳಿಂಗ ಸರ್ಪದ ಮೇಲೆ ಪ್ರಯೋಗ ಪ್ರಾರಂಭವಾಗುತ್ತದೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಮುಖ್ಯ ಅಧಿಕಾರಿ ಪಿ. ಗೌರಿಶಂಕರ್.ಗೌರಿಶಂಕರ್ ಹೇಳುವಂತೆ, ಅವರು ಇಲ್ಲಿಗೆ ಬಂದ ನಂತರ ಸಮೀಪದ ಮನೆ, ಕೊಟ್ಟಿಗೆ, ಬಾವಿಯಲ್ಲಿ ಕಂಡುಬಂದ೫೦ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದಿದ್ದಾರೆ. ಅದೂ ಸುತ್ತಮುತ್ತಲ ಹಳ್ಳಿಗಳ ಮನೆಗಳಲ್ಲಿ ಸೇರಿಕೊಂಡಿರುವ ಕಾಳಿಂಗನನ್ನು ಹಿಡಿಯಲಾಗಿದೆ. ಹಾಗೆ ಅದನ್ನು ಅಲ್ಲೇ ಸಮೀಪದ ಕಾಡಿನಲ್ಲಿ ಬಿಡಲಾಗಿದೆ.ಈ ವರೆಗೆ ಕಾಡಿನಲ್ಲಿ ಸಿಕ್ಕ ಕಾಳಿಂಗನ ಮೊಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ನಂತರ ೧೮ ತಿಂಗಳಲ್ಲಿ ಸುಮಾರು ೧೧೯ ಮರಿಗಳನ್ನು ಪುನಃ ಕಾಡಿಗೆ ಬಿಡಲಾಗಿದೆ.
ಕಾಳಿಂಗನ ಬಗ್ಗೆ...ದೊಡ್ಡದಾದ ಶರೀರ, ನುಣುಪಾದ ಹೊಳೆಯುವ ಹುರುಪೆಗಳು; ಪ್ರಧಾನವಾಗಿ ಶರೀರದ ಮುಂಭಾಗದಲ್ಲಿ ವಿಶಿಷ್ಟವಾದ ಬಿಳಿಯ ಅಡ್ಡ ಪಟ್ಟೆಗಳು, ದೊಡ್ಡದಾದ ಕಲೆ, ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣವಿರುತ್ತದೆ.ಹುಟ್ಟಿದಾಗ ೫೦ ಸೆಂಟಿಮೀಟರ್ ಇದ್ದು, ಸರಾಸರಿ ಮೂರು ಮೀಟರ್ ಇರುತ್ತದೆ. ಇನ್ನು ಗರಿಷ್ಠ ೫ ಮೀಟರ್ ಇರುತ್ತದೆ.ಬೃಹತ್ ಗಾತ್ರದ ಕಾಳಿಂಗ ಸರ್ಪದ ದೊಡ್ಡ ತಲೆಯು ಗುತ್ತಿಗೆಗಿಂತ ಸ್ವಲ್ಪ ಅಗಲವಾಗಿರುತ್ತದೆ. ತಲೆಯ ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣ ಇರುತ್ತದೆ.ಹಳದಿಯಿಂದ ದಟ್ಟವಾದ ಆಲಿವ್ ಹಸಿರಿನವರೆಗೆ ಶರೀರದ ಒಟ್ಟು ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಬಾಲವು ಕೆಲವೊಮ್ಮೆ ಕಡು ಕಪ್ಪು ಬಣ್ಣ ಇರುತ್ತದೆ.ಶರೀರದ ತಳ ಭಾಗದ ಬಣ್ಣವು ಮೇಲ್ಘಾಗದ ಬಣ್ಣದಂತೆಯೇ ಇದ್ದು, ಸ್ವಲ್ಪ ತಿಳಿಯಾಗಿರುತ್ತದೆ.ಇದು ಪ್ರಧಾನವಾಗಿ ಹಾವುಗಳನ್ನು ಮತ್ತು ಕೆಲವೊಮ್ಮೆ ಹಲ್ಲಿಗಳನ್ನು ತಿನ್ನುತ್ತವೆ. ಕೇರೆ ಹಾವು ಮತ್ತು ಚೌಕಳಿ ಬೆನ್ನೇಣು ಹಾವುಗಳಂತಹ ದೊಡ್ಡ ಹಾವುಗಳೇ ಇದರ ಪ್ರಮುಖ ಆಹಾರವಾಗಿರುವುದಂತೆ ಕಾಣುತ್ತದೆ. ಗರಿಷ್ಟ ವಯೋಮಾನ ೩೦ ವರ್ಷ.ಇದರ ವಿಷ ನಾಗರ ಹಾವಿನ ವಿಷಕ್ಕಿಂತ ಕಡಿಮೆ ಪರಿಣಾಮ ಉಂಟುಮಾಡುವಂಥದ್ದು. ಆದರೆ ವಿಷ ಆನೆಯನ್ನೂ ಸಾಹಿಸಬಲ್ಲದು.ಥೈಲ್ಯಾಂಡಿನಲ್ಲಿ ಮಾತ್ರ ಈ ಹಾವಿನ ಕಡಿತದ ಚಿಕಿತ್ಸೆಗೆ ಬೇಕಾದ ಪ್ರತಿ ವಿಷ ದೊರೆಯುತ್ತದೆ.ಭಾರತದಲ್ಲಿ ಇವು ಅಪರೂಪವಾದರೂ ಬಹುತೇಕ ಪಶ್ಚಿಘಟ್ಟದಲ್ಲೇ ಹೆಚ್ಚಾಗಿ ಇದೆ. ಅಸ್ಸಾಂನ ಕಾಫಿ ಟೀ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.ಆವಾಸ ಸ್ಥಾನ ಹೆಚ್ಚಾಗಿ ಮಳೆ ಬೀಳುವ ಪ್ರದೇಶ, ಮತ್ತು ದಟ್ಟ ಸಸ್ಯ ರಾಶಿ ಇರುವೆಡೆ.ಹೆಣ್ಣು ಕಾಳಿಂಗ ಎಲೆಗಳಿಂದ ಗೂಡನ್ನು ನಿರ್ಮಿಸುತ್ತದೆ. ಗೂಡು ನಿರ್ಮಿಸಿಕೊಳ್ಳುವ ಜಗತ್ತಿನ ಏಕೈಕ ಹಾವುಕೂಡ ಇದಾಗಿದೆ.ಇನ್ನೊಂದು ಮಹತ್ವದ ಅಂಶ ಎಂದರೆ ಕಾಳಿಂಗ ಆಕ್ರಮಣದ ಸ್ವಭಾವ ಎಂದೆಲ್ಲಾ ಕೇಳಿದ್ದೇವೆ. ಆದರೆ ಅದು ಹೆಚ್ಚಿನ ಮಟ್ಟಗೆ ಕಲ್ಪನೆಯೇ. ದಾಖಲೆಗಳು ಹೇಳುವ ಪ್ರಕಾರ ಇವು ಸಾಧು ಸ್ವಭಾವದ ಸರ್ಪಗಳು. ಆಕ್ರಮಣ ಮಾಡಲು ಇಷ್ಟಪಡವು ಮತ್ತು ಸಾಧ್ಯವಾದಾಗಲೆಲ್ಲಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ.ನಿಸರ್ಗದ ನಡುವೆ ನೋಡಲು ಕಾಳಿಂಗ ಸರ್ಪ ನಿಜವಾಗಿಯೂ ಭಯಾನಕವಾಗಿವೆ. ಅದನ್ನು ಗಾಯಗೊಳಿಸಿದಾಗ ಅಥವಾ ನಿರ್ಬಂಧಿಸಿದಾಗ ಮಾತ್ರ ಅದು ಬಾಯ್ತೆರೆದು ಜೋರಾಗಿ ಬುಸುಗುಟ್ಟುತ್ತಾ ಆಕ್ರಮಣದ ಮಾಡಿದ ವ್ಯಕ್ತಿಯ ಮೇಲೆರಗಬಹುದು.ಇತರೆ ಹಾವುಗಳಿಗೆ ಅಪರೂಪದವಾದ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ಕಾಳಿಂಗ ಸರ್ಪಗಳು ವರ್ತಿಸುತ್ತವೆ.

Tuesday 15 May, 2007

ನೋಡ ಬನ್ನಿ ಕುಂದಾದ್ರಿ...

... ಬನ್ನಿ
ಮೋಡದ ಜೊತೆ ಗುದ್ದಾಡಬೇಕೇ? ದೂರದಲ್ಲೆಲ್ಲೋ ಕಾಣುವ ಆಕಾಶವೆಂಬುದನ್ನು ಮುಟ್ಟಬೇಕೆ? ವಿಶಾಲ ಪಶ್ಚಿಮ ಘಟ್ಟವನ್ನು ಒಂದು ಕೇಂದ್ರ ಬಿಂದುವಾಗಿಟ್ಟುಕೊಂಡು ಸುತ್ತಲೂ ನೋಡಬೇಕೆ? ಇನ್ನು ಕರ್ನಾಟಕಕ್ಕೇ ಕರೆಂಟುಕೊಡುವುದಕ್ಕಾಗಿ ಸಾವಿರಾರು ಎಕರೆ ಮುಳುಗಡೆ ಮಾಡಿದಂತೆ ವಾರಾಹಿ ಹಿನ್ನೀರಿನ ಕರಾಳ ದೃಶ್ಯ ನೋಡಬೇಕೆ? ಹಾಗಿದ್ದರೆ ಬನ್ನಿ... ನಿಮ್ಮನ್ನು ಕೈ ಬೀಸಿ ಕರೆಯತ್ತಿದೆ ಕುಂದಾದ್ರಿ ಬೆಟ್ಟ.
ದೂರದಲ್ಲೋ ಕಾಣುವ ಮೋಡ ಈ ಕುಂದಾದ್ರಿಯ ಮೇಲೆ ನಿಂತರೆ ನಿಮ್ಮ ಮಧ್ಯೆ, ನಿಮ್ಮನ್ನು ಸೀಳಿಕೊಂಡೇ ಹೋಗುತ್ತದೆ. ಅದೊಂದು ಹೊಸ ಅನುಭವ ಕೊಡುವ ಸ್ಥಳ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿರುವ ಈ ಕುಂದಾದ್ರಿ ಬೆಟ್ಟ ಚಾರಣಿಗರ ಸ್ವರ್ಗ, ಪ್ರಕೃತಿ ಪ್ರಿಯರ ನೆಚ್ಚಿನ ತಾಣ.
ಸಮುದ್ರಮಟ್ಟದಿಂದ ಸುಮಾರು ೪೫೦೦ ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿಂದ ಪ್ರಕೃತಿಯನ್ನು ವೀಕ್ಷಿಸುವುದೇ ಹಬ್ಬ.
ಇತಿಹಾಸ ಹೇಳುತ್ತದೆ...
ಈ ಬೆಟ್ಟದ ಮೇಲೆ ಜೈನ ಬಸದಿ ಇದೆ. ಅಲ್ಲಿ ಶ್ರೀ ಪಾರ್ಶ್ವನಾಥರ ಮೂರ್ತಿ ಇದೆ. ಹಾಗೆಯೇ ಜೈನ ಪಂಥದಲ್ಲಿ ಪ್ರಮುಖರೆನಿಸಿಕೊಂಡ, ಸಾಧಕರಾದ ಕುಂದ ಕುಂದಾಚಾರ್ಯರ ಮುಕ್ತಿ ಸ್ಥಳ ಇಲ್ಲಿದೆ.
ವಿಶೇಷತೆ...
ಇಲ್ಲೇ ಸಣ್ಣ ಪುಷ್ಕರಣಿ ಇದ್ದು, ಅಲ್ಲಿ ವರ್ಷದ ೩೬೫ ದಿನವೂ ನೀರು ಇರುವುದು ವಿಶೇಷ. ಇನ್ನೊಂದು ಪುಟ್ಟದಾದ ತಾವರೆಕೆರೆ. ಅಲ್ಲಿ ತಾವರೆ ಹೂವು ಅರಳಿ ನಿಂತಿರುವುದು ಆಶ್ಚರ್ಯ ತರುತ್ತದೆ.
ಸೂರ್ಯೋದಯ ಮತ್ತು ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ.
ಸೂರ್ಯೋದಯದ ಮೊದಲ ಕಿರಣ ಶ್ರೀ ಪಾರ್ಶನಾಥರ ವಿಗ್ರಹದ ಪಾದದ ಮೇಲೆ ಬೀಳಲು ಪ್ರಾರಂಭವಾಗುತ್ತದೆ. ಹಾಗೆಯೇ ಸೂರ್ಯಾಸ್ತ ಕೂಡ ವಿಶೇಷ ಆನಂದಕೊಡುತ್ತದೆ.
ಮೋಡ, ಮಂಜು ಅಷ್ಟಾಗಿ ಇಲ್ಲದ ಸಮಯದಲ್ಲಿ ಕಿಲೋಮೀಟರ್ ಗಟ್ಟಲೇ ದೂರದ ಕರಾವಳಿಯ ಸಮುದ್ರ ಕಡಲಲ್ಲಿ ದೊಡ್ಡ ದೊಡ್ಡ ಹಡಗುಗಳು ಹಾದು ಹೋಗುವುದು ಪುಟ್ಟದಾಗಿ ಕಾಣುತ್ತದೆ.
ಪ್ರತಿ ವರ್ಷ ಜನವರಿಯಲ್ಲಿ ಇಲ್ಲಿ ಜಾತ್ರೆ ನಡೆಯಲಿದ್ದು, ಉತ್ತರ ಭಾರತದಿಂದ ಸಾವಿರಾರು ಜನರು ಇಲ್ಲಿಗೆ ಬಂದು ಪದ್ಮಾವತಿ, ಪಾರ್ಶ್ವನಾಥ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಮೊಲ, ಕಾಡೆಮ್ಮೆ ಸಾಕಷ್ಟು ಕಂಡುಬಂದರೆ, ಹುಲಿ ಮುಂತಾದ ಕ್ರೂರ ಪ್ರಾಣಿ ಈ ಭಾಗದಲ್ಲಿ ಇದೆಯಂತೆ.
ಇಲ್ಲಿಗೇ ಸಮೀಪವೇ ಆಗುಂಬೆ, ಜೋಗಿಗುಂಡಿ ಜಲಪಾತವಿದೆ. ೨೯ ಕಿಲೋಮೀಟರ್ ತೆರಳಿದರೆ ಶೃಂಗೇರಿ.
ಮಾರ್ಗಸೂಚಿ: ಶಿವಮೊಗ್ಗ- ಉಡುಪಿ ರಸ್ತೆಯಲ್ಲಿ ತೀರ್ಥಹಳ್ಳಿಯಿಂದ ಆಗುಂಬೆ ಕಡೆಗೆ ಹೋಗುವ ರಸ್ತೆಯಲ್ಲಿ ಕುಂದಾದ್ರಿ ಬರುತ್ತದೆ. ಮುಖ್ಯ ರಸ್ತೆಯಿಂದ ನಾಲ್ಕು ಕಿಲೋಮೀಟರ್ ಒಳ ರಸ್ತೆಯ ಮೂಲಕ ಸಾಗಿದರೆ ನಂತರ ನಂತರ ೪ ಕಿಲೋಮೀಟರ್ ಗುಡ್ಡವೇರಬೇಕು.
ಇಲ್ಲವಾದರೆ ಖಾಸಗಿ ವಾಹನದಲ್ಲಿ ಗುಡ್ಡದ ಮೇಲೆ ತೆರಳಬಹುದು. ಉತ್ತಮ ರಸ್ತೆ ಇದೆ. (ಕಂಡೀಷನ್‌ನಲ್ಲಿರುವ ವಾಹನ ಮಾತ್ರ ಗುಡ್ಡ ಹತ್ತಲು ಸಾಧ್ಯ).

ಪರಿವರ್ತನೆ ಅಲೆ ಈ ಮಾಧವ ನೆಲೆ ಚಿಂದಿ ಆಯುವ ಮಕ್ಕಳ ಆಶ್ರಯ ತಾಣ


ಶ್ರೀಕಾಂತ್ ಎಸ್.ಭಟ್
ಮಾಧವ ನೆಲೆ. ಇದು ಮಾಧವನ ನೆಲೆಯೇ. ಶಿವಮೊಗ್ಗದ ಸೋಮಯ್ಯ ಬಂಗ್ಲೆಯಲ್ಲಿರುವ ಈ ‘ನೆಲೆ’ ಚಿಂದಿ ಆಯುವ ಮಕ್ಕಳ ಆಶ್ರಯ ತಾಣ. ಈಗ ಇದಕ್ಕೆ ಒಂದು ವರ್ಷದ ಸಂಭ್ರಮ.
ಚಿಂದಿ ಆಯುತ್ತಾ ಮಕ್ಕಳು ಕ್ರಮೇಣ ದುಶ್ಚಟಗಳ ದಾಸರಾಗಿ, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಕಂಟಕರಾಗಿ ಬೆಳೆಯುವ ಸಂಭವವೇ ಹೆಚ್ಚು. ಇದು ಚಿಂತಾಜನಕ ಸಂಗತಿ. ಇದಲ್ಲದೇ ಅನಾಥ ಮಕ್ಕಳು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಸಮಸ್ಯೆಗೆ ದೊಡ್ಡಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಪ್ರಮಾಣದಲ್ಲಿ ಮಾದರಿಯಾಗಿ ಹಿಂದುಸೇವಾ ಪ್ರತಿಷ್ಠಾನ ಕಂಡುಕೊಂಡ ಉತ್ತರ ‘ನೆಲೆ’.
‘ನೆಲೆ’ಯ ಕತೃ ಶಿವಮೊಗ್ಗದ ವಿಕಾಸ ಟ್ರಸ್ಟ್. ಅಲ್ಲದೇ ಇದು ಹಿಂದೂಸೇವಾ ಪ್ರತಿಷ್ಠಾನದ ಪ್ರಕಲ್ಪ.
‘ನೆಲೆ’ಯೇ ಇಲ್ಲದ ಮಕ್ಕಳಿಗೆ ನೆಲೆಯನ್ನೊದಗಿಸುವುದು, ಶಿಕ್ಷಣ ಸಂಸ್ಕಾರ ನೀಡುವುದು ಈ ಪ್ರಕಲ್ಪದ ಉದ್ದೇಶ. ಸುಮಾರು ೨೦ ಮಕ್ಕಳು ಇಲ್ಲಿದ್ದು, ಅವರಲ್ಲಿ ಬಹುತೇಕರು ಚಿಂದಿ ಆಯುತ್ತಿದ್ದ ಪುಟ್ಟ ಕಂದಮ್ಮಗಳು. ಈಗ ಪರಿವರ್ತನೆಯ ಅಲೆಯಲ್ಲಿ ತೇಲಲು ಪ್ರಾರಂಭಿಸಿದ್ದಾರೆ.
ತಂದೆ ತಾಯಿಯವರ ವಾತ್ಸಲ್ಯ, ಅಣ್ಣ- ತಮ್ಮ, ಅಕ್ಕ ತಂಗಿಯರ ಪ್ರೀತಿ, ಶಾಲೆಯ ಶಿಕ್ಷಣ, ಸಹ ಪಾಠಿಗಳೊಂದಿಗೆ ಆಟ, ಸಜ್ಜನರ ಸಹವಾಸ ಈ ಎಲ್ಲವುಗಳಿಂದಲೂ ದೂರವಾದ ಸುಮಾರು ೬ರಿಂದ ೧೪ ವಯಸ್ಸಿನವರೆಗಿನ ಮಕ್ಕಳಿಗೆ ಇಲ್ಲಿ ಅವಶ್ಯಕ ವಿದ್ಯಾಭ್ಯಾಸ, ಸತ್ಸಂಸ್ಕಾರ ಹಾಗೂ ಅವರ ಭೌತಿಕ ಮಾನಸಿಕ ಬೆಳವಣಿಗೆಗೆ ಅವಶ್ಯಕವಾದ ಸವಲತ್ತನ್ನು ನೀಡಲಾಗುತ್ತಿದೆ.
ಶಿವಮೊಗ್ಗ, ಶಿಕಾರಿಪುರ, ಶೃಂಗೇರಿ, ಭದ್ರಾವತಿ ಮತ್ತಿತರ ಊರುಗಳ ಅರುಣ, ದೀಪಕ್, ಪುಷ್ಪರಾಜ್, ವೆಂಕಟೇಶ್, ಪಾವನ, ಪ್ರದೀಪ, ಹಾಲೇಶ್, ಕಾರ್ತಿಕ್ ಹೀಗೆ ೨೦ ಮಕ್ಕಳು ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ. ೧೦-೧೨ ಮಕ್ಕಳು ದಿನನಿತ್ಯ ಬೆಳಿಗ್ಗೆ ಬಂದು ಊಟ, ಶಿಕ್ಷಣ ಪಡೆದು ಸಂಜೆ ಮನೆಗೆ ತೆರಳುವವರು ಇದ್ದಾರೆ.
ಶಾಲೆಗೆ ಕಳಿಸಲಾಗದ ಪರಿಸ್ಥಿತಿಯಲ್ಲಿರುವ ಕೆಲ ಪೋಷಕರ ಒಂದೆರಡು ಮಕ್ಕಳು ಈ ನೆಲೆಯಲ್ಲಿದ್ದಾರೆ.
ನಗರದ ಖ್ಯಾತ ಶಿಕ್ಷಣ ಸಂಸ್ಥೆಗಳಾದ ವಿಕಾಸ ವಿದ್ಯಾಸಮಿತಿ ಹಾಗೂ ದೇಶೀಯ ವಿದ್ಯಾಶಾಲಾ ಸಮಿತಿ, ತುಂಗಾ ಪ್ರೌಢಶಾಲೆ ಈ ಸೇವೆಗೆ ಕೈ ಜೋಡಿಸಿದ್ದು ಇಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ವಿಕಾಸ ವಿದ್ಯಾಸಮಿತಿ ಇಲ್ಲಿನ ಮಕ್ಕಳನ್ನು ತನ್ನದೇ ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗಿ ತಂದು ಬಿಡುವ ವ್ಯವಸ್ಥೆ ಮಾಡಿದೆ.
ಚಟುವಟಿಕೆ ಹೀಗೆ ನಡೆಯುತ್ತದೆ...
ಬೆಳಿಗ್ಗೆ ೫.೩೦ಕ್ಕೆ ಮಾಧವನ ಮಕ್ಕಳ ಚಟುವಟಿಕೆ ಪ್ರಾರಂಭವಾಗುತ್ತದೆ. ಪ್ರಾತಃಸ್ಮರಣೆ, ವ್ಯಾಯಾಮ, ಯೋಗಾಭ್ಯಾಸ, ಸ್ನಾನ, ಉಪಾಹರ ಮುಗಿಸಿ ನಂತರ ಶಾಲೆಗೆ ತೆರಳುತ್ತಾರೆ. ನಂತರ ಸಂಜೆ ಶಾಲೆಯಿಂದ ಬಂದು ಕ್ರೀಡೆ, ಭಜನೆಯಲ್ಲಿ ಪಾಲ್ಗೊಂದು ಪಠ್ಯ ಅಭ್ಯಾಸಿಸುತ್ತಾರೆ.
ಹಾಗೆಯೇ ಮಕ್ಕಳಲ್ಲಿ ಹುದುಗಿರುವ ಕಲಾತ್ಮಕ ಚಟುವಟಿಕೆಗಳನ್ನು ಹೊರತರುವ ಮೂಲಕ ಅಭಿವೃದ್ಧಿ ಪಡಿಸುವ ಕಾರ್‍ಯ ನಡೆಯುತ್ತಿದೆ.
ಮಕ್ಕಳಿಗೆ ಸಂಸ್ಕಾರ ನೀಡುವ ದೃಷ್ಟಿಯಿಂದ ಬಾಲ ಗೋಕುಲ, ಚಿತ್ರಕಲೆ, ಸಂಗೀತ, ಭರತ ನಾಟ್ಯ, ಯಕ್ಷಗಾನ, ಕೋಲಾಟ, ಕೈಕುಸುಬುಗಳ ತರಬೇತಿಯನ್ನೂ ಪಡೆಯುತ್ತಿದ್ದಾರೆ.
ಇಂತಹ ಮಕ್ಕಳ ಮನೆಮಂದಿಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುವುದರೊಂದಿಗೆ ಆ ಕುಟುಂಬಗಳಿಗೆ ಮತ್ತು ಈ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಿ ತನ್ಮೂಲಕ ಸುಖೀ ಸಮಾಜವನ್ನು ನಿರ್ಮಿಸುವುದು ಸಂಸ್ಥೆಯ ಉದ್ದೇಶ.
ಮುದ್ದು ಕಂದಮ್ಮಗಳಿಗಾಗಿ ಮಾಧವನ ನೆಲೆಯಲ್ಲಿ ನಡೆಯುತ್ತಿರುವ ಸೇವಾ ಯಜ್ಞಕ್ಕೆ ಯಾರೊಬ್ಬರೂ ಕೈ ಜೋಡಿಸಬಹುದು. ನಿವೃತ್ತ ಶಿಕ್ಷಕರು ಇಲ್ಲಿನ ವಿದ್ಯಾರ್ಥಿಗಳಿಗೆ ಕೆಲ ಹೊತ್ತು ಪಾಠ ಹೇಳಿಕೊಡಬಹುದು, ವಿಶೇಷ ಕಲೆ ಗೊತ್ತಿರುವವರು ಮಕ್ಕಳಿಗೆ ಆ ಕಲೆಯನ್ನು ಕಲಿಸಬಹುದು, ಇಷ್ಟಲ್ಲದೇ ಊಟ ಉಪಚಾರದ ವ್ಯವಸ್ಥೆ ನೋಡಿಕೊಳ್ಳಬಹುದು. ಮನೆಯಲ್ಲಿ ಯಾರೊಬ್ಬರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮತ್ತು ಹಿರಿಯರ ನೆನಪಿನ ದಿನ, ಸಮಾರಂಭ, ಇನ್ನಿತರೆ ದಿನಗಳಂದು ನೆಲೆಗೆ ದೇಣಿಗೆ ನೀಡಿ ಮಕ್ಕಳಿಗೆ ಸಹಕಾರ ನೀಡಬಹುದು.
ಮಾಹಿತಿಗಾಗಿ: ೯೪೮೦೨ ೮೦೯೩೫, ೯೪೪೯೮ ೯೭೧೬೧

Friday 11 May, 2007

ಇದು ಪಾನಕ ಪ್ರಪಂಚ...

ನಿಮಗೆ ಗೊತ್ತಾ, ೫೦ ವಷ೯ದ ಕೆಳಗೆ ಮಲೆನಾಡು ಭಾಗದಲ್ಲಿ ೭೦ಕ್ಕೂ ಹೆಚ್ಚು ರೀತಿ ಪಾನಕ ಇತ್ತು. ಇದು ಪ್ರೂವ್ ಆಗಿದೆ. ದಾಖಲೆ ಸಮೇತ.
ಕೃಷಿ ಪ್ರಯೋಗ ಪರಿವಾರ ಸಂಸ್ಥೆಯು ೪೦ ಜನರ ಸಹಾಯ ಪಡೆದು ಈ ಮಹತ್ ಕಾರ್ಯ ಮಾಡಿದೆ.
ಇದು ೨ ವಷ೯ದ ಪ್ರಯತ್ನ. ಸಾಗರ, ಸೊರಬ, ಶಿರಸಿ, ಸಿದ್ದಾಪುರ ಸುತ್ತಮುತ್ತಲ ಹಳ್ಳಿಗಳಲ್ಲಿ ತಿರುಗಿ, ಮನೆಗಳಲ್ಲಿರುವ ಅಜ್ಜಿಯರನ್ನು ಮಾತನಾಡಿಸಿ ಪಾನಕದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಪಾನಕ ಮಾಡುವ ವಿಧಾನ, ಬಳಸುವ ವಸ್ತು, ಪ್ರಮಾಣ, ಅದನ್ನು ಸೇವಿಸುವುದರಿಂದ ಆಗುವ ಪ್ರಯೋಜನ... ಹೀಗೆ ಮಾಹಿತಿ ಕಲೆ ಹಾಕಲಾಗಿದೆ.
ಹೆಚ್ಚಿನ ಪಾನಕದಲ್ಲಿ ಬಳಸುತ್ತಿದ್ದುದು ಕಾಡಿನಲ್ಲಿ ಸಿಗುವ ಆಯು೯ವೇದ ಸಸ್ಯಗಳಾಗಿದ್ದವು.

ಉದ್ದೇಶ...
ಪೆಪ್ಸಿ, ಕೋಕ್, ಮಿರಿಂಡ, ಸವೆನ್ ಅಪ್ ನ ಕೇಕುವಾಕುಗಳಿಂದ ಇಂದು ಸ್ವಮೇಕ್ ಪಾನಕ ಜನರಿಂದ ಬಹಳಷ್ವು ದೂರವಾಗಿದೆ.
ಅದೊಂದು ಕಾಲವಿತ್ತು, ಮದ್ಯಾಹ್ನ ಮನೆಗೆ ಬಂದ ಅತಿಥಿಗಳನ್ನು ಪಾನಕ ನೀಡಿ ಸತ್ಕರಿಸಲಾಗುತ್ತಿತ್ತು. ಕಾಲಕ್ಕೆ ತಕ್ಕಂತೆ ವಿವಿಧ ಬಗೆಯ ಪಾನಕ ಸಿದ್ಧವಾಗುತ್ತಿತ್ತು. ಆದರೆ ಇಂದು ಆಸ್ತಾನ ಪೆಪ್ಸಿ, ಕೋಕ್ ಆಕ್ರಮಿಸಿಕೊಂಡಿದೆ. ಮತ್ತೆ ಪಾನಕ ಸಂಸ್ಕ್ರುತಿ ಪ್ರತಿಮನೆಗೆ ಮುಟ್ಟಿಸುವುದು ಉದ್ದೇಶ. ಅಲ್ಲದೆ, ಗ್ರಾಮಾಂತರ ಶ್ರೀಮಂತ ವೈವಿದ್ಯವನ್ನು ನಗರವಾಸಿಗಳಿಗೆ ತಿಳಿಸುವ ಸಣ್ಣ ಪ್ರಯತ್ನ.

ಹಾಗೆ ಈ ತಿಂಗಳಾಂತ್ಯಕ್ಕೆ ಆಸರಿಗೆ ಮೇಳ ಅನ್ದ್ರೆ... ಪಾನಾಕ ಮೇಳ ಸಾಗರದಲ್ಲಿ ಆಯೋಜನೆಗೊಂಡಿದೆ. ಉಚಿತ ಪ್ರವೇಶ.
ದಾಖಲೆಗೆ ಸಿಕ್ಕಿರುವ ಎಲ್ಲಾ ೬೦ ಬಗೆ ಪಾನಕ ಕುಡಿವ ಅವಕಾಶ ಉಂಟು.
- ಶ್ರೀಕಾಂತ್ ಭಟ್
೯೩೪೩೩೧೧೧೨೬

Thursday 10 May, 2007

cute... cute... cute


swagatha.. nimagidoa suswagatha...

cute... cute... cute...

Tuesday 8 May, 2007

ಇದು ನನ್ನ ಕತೆ....

ಒಂದೂರಿನಲ್ಲಿ ಒಬ್ಬಳು ಅಜ್ಜಿ ಇದ್ದಳು..... ಆ ಮೇಲೆ... ನಾಳೆ ಹೇಳ್ತಿನಿ....